Thursday 17 September 2015

> ಶುಭರಾತ್ರಿ...

ಮೂಡಣದಿ ದಿನಕರನು ಆರತಿಯ ಬೆಳಗುತಿರೆ
ಭೂತಾಯಿಯ ಮಡಿಲಲ್ಲಿ ಮರುಹುಟ್ಟುವ ಜೀವಸೆಲೆ
ಹಸಿರೆಲೆಯ ತುದಿಯಿಂದ ಇಬ್ಬನಿಯು ಜಾರುತಿರೆ
ಬಿತ್ತಾ ಹನಿಯು ಮರಿ ಮಿಡತೆಯ ಮುಡಿಯ ಮೇಲೆ...



ಮಾಮರದ ಮರೆಯಿಂದ ಕೋಗಿಲೆಯ ದನಿಕೇಳಿ
ಶುರುವಿಟ್ಟವು ಬೇರೆಲ್ಲ ಪಕ್ಷಿಗಳು ಚಿಲಿಪಿಲಿ..
ಕೊಟ್ಟಿಗೆಯ ಮೂಲೆಯಲಿ ಅಂಬಾ ಎನ್ನುತ್ತಿದ್ದ ಆ ಕರು
ತಾಯ ಮಡಿಲ ಸೇರುವ ತವಕವ ತಡೆಯುವರಾರು...

ಕ್ಷಣಕಳೆದಂತೆ ಎಂದಿನ ದಿನಚರಿ ಆರಂಭ
ಪ್ರತಿದಿನವೂ ಅದೇ ಕೆಲಸದ ಪ್ರತಿಬಿಂಬ
ಮಾನವನ ಗುರಿಯು ಗರಿಯ ನೋಟುಗಳ ಕಂತೆ..
ಪ್ರಾಣಿ ಪಕ್ಷಿಗಳಿಗೆ ಇಂದಿನ ಆಹಾರದ ಚಿಂತೆ...

ದಿನವೆಲ್ಲ ಕಾರ್ಯದಲಿ ತೊಡಗಿ ಸೊರಗುವ ಜೀವಿ
ಸಂಜೆಯಾದಂತೆ ಬೇಗ ಮನೆಗೆ ತೆರಳುವ ಭೋಗಿ...
ಧೂಳೆಬ್ಬಿಸುತ ಗೋಧೂಳಿಯಲಿ ಹಟ್ಟಿಗೆ ಮರಳುವ ಆಕಳು...
ಗೂಡಿನಡೆ ಗುಂಪಾಗಿ ತೇಲಿಬರುವ ಬಾನಾಡಿಗಳು...


ದಣಿವರಿದ ಜೀವದ ವಿಶ್ರಾಂತಿಯ ಬೇಡಿಕೆ..
ಕಣ್ಣ ಮುಚ್ಚಿರಲು ಗಾಢ ನಿದಿರೆಯ ಹೊದಿಕೆ
ತಾರೆಗಳ ನಡುವಲ್ಲಿ ಬೆಳಗುತಿರೆ ಚಂದಿರನು..
ಕಾಣು ನೀ ನಿದಿರೆಯಲಿ ಸವಿಯಾದ ಸ್ವಪ್ನವನು…

ಇಂತಿ,
ನಾಗೇಶ್ :) ...

Friday 31 July 2015

ಮಳೆಗಾಲದ ಮುಂಜಾನೆ....

ಮನದಲ್ಲಿ ಮಾನಿನಿಯು ಮೌನದಲಿ ಮಲಗಿರಲು
ಮಾಮರದ ಮರೆಯಲ್ಲಿ ದನಿಯೊಂದು ಮೂಡಿತ್ತು
ಮೂಡಣದಿ ಮುಂಜಾನೆ ರವಿಮಾಮ ಮೇಲೆದ್ದಿರೆ
ಮೋಡದ ಮುಸುಕಲ್ಲಿ ಬಿಸಿಲು ಮಂಕಾಗಿತ್ತು

ಮಂದವಾಗಿದೆ ಬಾನಿದು ಇಂದು..
ಅಂದವಾಗಿದೆ ಮೋಡವು ಬಂದು..
ಮೋಡದ ಎಡೆಯಿಂದ ಕಿರಣದ ಅಲೆಯೊಂದು..
ಬಂದು ಬಿದ್ದಿರೆ ಮನದ ಕದದ ಮೇಲಿಂದು...
ನೋಡುತಿರೆ ಮೂಡಣದಿ ದಿನಕರನ ದಿನಚರಿಯ..
ಹರಿಣದಂತೆ ಎದೆಯಲ್ಲಿ ಕುಣಿದಾಡುವ ಹೃದಯ..

ಮಳೆಗಾಲದ ಮಾಸವಿದು ಮೋಡಗಳು ಮಾಮೂಲು..
ಕಾರ್ಮೊಡವು ಮೇಲೆದ್ದಿರೆ ಮಳೆಯ ಮೆಲುಕು ಮನದಲ್ಲೂ..
ಮಳೆಯ ಆಗಮನಕೆ ಮೋಡದೆಡೆ ಮುಖ ಮಾಡಿರಲು..
ಮನದ ಮನೆಯಲ್ಲಿ ಮೆಲ್ಲನೆ ಕಮರಿತ್ತು ಮಂಪರು..

ಕನಸುಗಳ ಕಾಡಲ್ಲಿ ಕೊಂಚ ಕೊರೆದ ಕಲ್ಲಿನ ಕೆಳಗೆ ಕುಳಿತು
ಕತ್ತನೆತ್ತಲು ಕಂಡೆ ಕಾಮನಬಿಲ್ಲ ಕೈಚಳಕ....
ಕಾರ್ಮೋಡದ ಕಡಿದಾದ ಕಣಿವೆಯಲಿ
ಇಣುಕಿ ಕಿರುನಗುವ ಓಕುಳಿಯ ಕಂಡು ಮೈಪುಳಕ...

ಕಾರ್ಮೋಡದ ಮರೆಯಿಂದ ಮಳೆಹನಿಯು
ಕಾಮನಬಿಲ್ಲಲ್ಲಿ ಮುಳುಗೆದ್ದು ಧುಮುಕುತಿರೆ
ಮರದೆಲೆಯಡಿ ಮೊರೆಯಿಡುತ್ತಿತ್ತೊಂದು ಮರಿಹಕ್ಕಿಯು 
ತನ್ನಮ್ಮ ಮನೆಗಿನ್ನೂ ಮರಳಿಲ್ಲವೆಂದು...

ಇಂತಿ,
ನಾಗೇಶ್ :)