Thursday 17 September 2015

> ಶುಭರಾತ್ರಿ...

ಮೂಡಣದಿ ದಿನಕರನು ಆರತಿಯ ಬೆಳಗುತಿರೆ
ಭೂತಾಯಿಯ ಮಡಿಲಲ್ಲಿ ಮರುಹುಟ್ಟುವ ಜೀವಸೆಲೆ
ಹಸಿರೆಲೆಯ ತುದಿಯಿಂದ ಇಬ್ಬನಿಯು ಜಾರುತಿರೆ
ಬಿತ್ತಾ ಹನಿಯು ಮರಿ ಮಿಡತೆಯ ಮುಡಿಯ ಮೇಲೆ...



ಮಾಮರದ ಮರೆಯಿಂದ ಕೋಗಿಲೆಯ ದನಿಕೇಳಿ
ಶುರುವಿಟ್ಟವು ಬೇರೆಲ್ಲ ಪಕ್ಷಿಗಳು ಚಿಲಿಪಿಲಿ..
ಕೊಟ್ಟಿಗೆಯ ಮೂಲೆಯಲಿ ಅಂಬಾ ಎನ್ನುತ್ತಿದ್ದ ಆ ಕರು
ತಾಯ ಮಡಿಲ ಸೇರುವ ತವಕವ ತಡೆಯುವರಾರು...

ಕ್ಷಣಕಳೆದಂತೆ ಎಂದಿನ ದಿನಚರಿ ಆರಂಭ
ಪ್ರತಿದಿನವೂ ಅದೇ ಕೆಲಸದ ಪ್ರತಿಬಿಂಬ
ಮಾನವನ ಗುರಿಯು ಗರಿಯ ನೋಟುಗಳ ಕಂತೆ..
ಪ್ರಾಣಿ ಪಕ್ಷಿಗಳಿಗೆ ಇಂದಿನ ಆಹಾರದ ಚಿಂತೆ...

ದಿನವೆಲ್ಲ ಕಾರ್ಯದಲಿ ತೊಡಗಿ ಸೊರಗುವ ಜೀವಿ
ಸಂಜೆಯಾದಂತೆ ಬೇಗ ಮನೆಗೆ ತೆರಳುವ ಭೋಗಿ...
ಧೂಳೆಬ್ಬಿಸುತ ಗೋಧೂಳಿಯಲಿ ಹಟ್ಟಿಗೆ ಮರಳುವ ಆಕಳು...
ಗೂಡಿನಡೆ ಗುಂಪಾಗಿ ತೇಲಿಬರುವ ಬಾನಾಡಿಗಳು...


ದಣಿವರಿದ ಜೀವದ ವಿಶ್ರಾಂತಿಯ ಬೇಡಿಕೆ..
ಕಣ್ಣ ಮುಚ್ಚಿರಲು ಗಾಢ ನಿದಿರೆಯ ಹೊದಿಕೆ
ತಾರೆಗಳ ನಡುವಲ್ಲಿ ಬೆಳಗುತಿರೆ ಚಂದಿರನು..
ಕಾಣು ನೀ ನಿದಿರೆಯಲಿ ಸವಿಯಾದ ಸ್ವಪ್ನವನು…

ಇಂತಿ,
ನಾಗೇಶ್ :) ...