ಹುಟ್ಟು ತಂದೆ-ತಾಯಿಯ ವರ. ಜನನ ನೀಡಿದ ಜನಕರನ್ನು ಜೀವನವಿಡೀ ಜೊತೆಗಿದ್ದು ಜತನದಿಂದ ನೋಡಿಕೊಂಡರೆ ಅವರಿಗೂ ಸಂತೋಷ.. ನಮ್ಮ ಜನ್ಮವೂ
ಸಾರ್ಥಕ.. ಹುಟ್ಟಿನಿಂದ ಮೊದಲುಗೊಂಡು ಪ್ರೀತಿ, ಆರೈಕೆ, ವಿದ್ಯಾಭ್ಯಾಸ, ಕಾಳಜಿ ಎಲ್ಲವನ್ನು ಧಾರೆಯೆರೆದು, ಮಕ್ಕಳ ಬದುಕಿಗೊಂದು
ನೆಲೆಗಾಣಿಸುವ ಪೋಷಕರಿಗೊಂದು ಸಲಾಮ್....
ನವಮಾಸ ಪೂರೈಸಿದ ಆ ಕ್ಷಣ
ಜಗದ ಬೆಳಕ ಕಾಣುವ ಮಗು
ಬೆಳಕ ಕಂಡ ಆ ಕ್ಷಣ
ಮಗುವಿಗೆ ಬಾರದು ನಗು
ಮೊದಲು ಅಳುವುದಾ ಮಗು
ಆಮೇಲೆ ಬರುವುದು ನಗು
ಪೋಷಕರ ಮೊಗದೊಳಗೂ
ತಂದೆ-ತಾಯಿ ಪ್ರೀತಿ ತೋರಿಸಿ
ಬೆಳೆಸುವರು ಕಾಳಜಿವಹಿಸಿ
ಬಾಲ್ಯದಲಿ ಸೇರುವುದು ಅಂಗನವಾಡಿ
ಅಲ್ಲಿ ಬೆಳೆಯುವುದು ಮಗು ಆಟವಾಡಿ
ಆಗಾಗ ಸಿಗುವ ಬಗೆಬಗೆಯ ತಿನಿಸು
ಅದ ನೋಡಿ ಮುದಗೊಳ್ಳುವುದು ಮಗುವಿನ ಮನಸು
ಆ ಮುದವ ನೋಡುವುದೇ ಸೊಗಸು
ಮಗುವಿನ ಮೇಲಿರುವುದು ತಂದೆ-ತಾಯಿಯ ಕನಸು
ನಂತರ ಶುರು ಪ್ರಾಥಮಿಕ ಶಿಕ್ಷಣ
ಇಲ್ಲಿಂದ ಶುರು ವಿದ್ಯಾಭ್ಯಾಸದ ಆರೋಹಣ
ಒಂದರಿಂದ ಏಳನೇ ತರಗತಿ
ಇದುವೇ ಎಲ್ಲರ ಬಾಳಿಗೆ ತಳಹದಿ
ಪ್ರತಿದಿನ ಮುಂಜಾನೆಯ ಪ್ರಾರ್ಥನೆ
ಟೀಚರ್ ಹೊಡೆದಾಗ ಆಗುವ ಯಾತನೆ
ಸಂಜೆಯ ತನಕ ಪಾಠ.. ಕೊನೆಯ ಅರ್ಧ ಗಂಟೆ ಆಟ
ನಡೆಯುವ ಶಾಲಾ ಚುನಾವಣೆಗಳು
ತರಗತಿಗೆ ಹೋಗಿ ಮಾಡಿದ ಪ್ರಚಾರಗಳು
ಗೆದ್ದವನೇ ಆ ಶಾಲಾ ನಾಯಕ
ಸೋತವನು ವಿರೋಧ ಪಕ್ಷದ ನಾಯಕ
ಮಂತ್ರಿಗಳ ತಪ್ಪನ್ನು ಹುಡುಕುವುದೇ
ವಿರೋಧ ಪಕ್ಷದ ಕಾಯಕ
ಪ್ರಾಥಮಿಕ ಶಿಕ್ಷಣ ಮುಗಿಸಿ
ಪ್ರೌಢಶಾಲೆಗೆ ಕಾಲಿರಿಸಿ
ತಮ್ಮ ಓದನ್ನು ಮುಂದುವರೆಸಿ
ಮುಗಿಸುವರು ಎಸ್.ಎಸ್.ಎಲ್.ಸಿ...
ನಂತರ ಕಾಲೇಜು.. ಆಗೆಲ್ಲ ಟೀನೇಜು
ಬರುವುದು ಕಮ್ಮಿ ಪರ್ಸೇಂಟೆಜು
ಜಗಳದ ಗಾಯಕ್ಕೆ ಹಚ್ಚಿದ ಬ್ಯಾಂಡೇಜು
ಡಿಗ್ರೀ ಕಾಲೇಜಿನ ಡೆಸ್ಕುಗಳಲ್ಲಿ
ಪ್ರೀತಿ ಪ್ರೇಮದ ಬರಹ
ದೂರಾದ ಪ್ರೇಮಿಗಳ ಮನದಲ್ಲಿ
ಪ್ರೀತಿ ಒಡೆದ ವಿರಹ
ಮುಗಿಯುತ್ತಲೇ ತಮ್ಮ ವಿದ್ಯಾಭ್ಯಾಸ
ಜೀವನಕ್ಕೆ ಹುಡುಕಬೇಕೊಂದು ಕೆಲಸ
ಕಾಲೇಜು ಮುಗಿಯುತ್ತಲೇ ಉದ್ಯೋಗ ಸಿಕ್ಕರೆ ಅದೃಷ್ಟ
ಸಿಗದಿದ್ದರೆ ಉದ್ಯೋಗಕ್ಕಾಗಿ ಅಲೆಯುವುದು ಕಷ್ಟ
ಸಿಕ್ಕಿದ ಮೇಲೆ ಉದ್ಯೋಗ
ಗಟ್ಟಿಯಾಗಿ ನೆಲೆ ನಿಲ್ಲಬೇಕು ಬದುಕಲ್ಲಿ
ತಮ್ಮ ಬದುಕಿನಲ್ಲಿ ಆಗಾಗ
ಮೋಜು ಮಾಡುವರು ಗೆಳೆಯರ ಜೊತೆಯಲ್ಲಿ
ಜೀವನದಲ್ಲಿ ನೆಲೆನಿಲ್ಲುತ್ತಲೇ, ಆಗುವರೊಂದು ಮದುವೆ
ಆಮೇಲೆ ಹೇಳುವರು, ಯಾರಿಗೆ ಬೇಕೀ ಗೊಡವೆ..
ಯೌವ್ವನದಲ್ಲಿ ಮದುವೆಯಾಗಲು ಆತುರಪಡುವೆ
ಇದು ವರ್ಷ ವರ್ಷವೂ ಹೆಚ್ಚಾಗುವ ನವೆ
ಎಂದು ಮದುವೆಯ ನಂತರವೇ ತಿಳಿಯುವುದಲ್ಲವೇ
ಸಂಗಾತಿಯಾಗಿ ಸಿಕ್ಕರೆ ಒಳ್ಳೆಯ ಹೆಂಡತಿ
ಚೆನ್ನಾಗಿರುವುದು ಗಂಡನ ಪರಿಸ್ಥಿತಿ
ಆಕೆಯ ಖರ್ಚಿಗಿಲ್ಲದಿದ್ದರೆ ಮಿತಿ
ಆಗುವುದು ಬೇಗನೆ ಪತಿಯ ತಿಥಿ
ಮಾಡುವವಳಾಗಿದ್ದರೆ ಆಕೆ ಮಿತವ್ಯಯ
ಉಳಿಯುವುದು ಗಂಡನ ಆದಾಯ
ಮುಂದೆ ಬರುವುದು ಮನೆ, ಮಕ್ಕಳು
ಮುಂದುವರಿವ ತಾಪತ್ರಯಗಳು
ಕೊಡಿಸಬೇಕು ಮಕ್ಕಳಿಗೆ ವಿದ್ಯಾಭ್ಯಾಸ
ಅವರನ್ನು ಸರಿದಾರಿಗೆ ತರುವುದೇ ಸಾಹಸ
ನಡೆಸಿಕೊಂಡು ಹೋಗುತ್ತಲಿ ಸಂಸಾರ
ಬರುಬರುತ್ತಾ ಜೀವನ ಬಲುಭಾರ
ಮಕ್ಕಳು ಬೆಳೆದು ದೊಡ್ದವರಾಗಲು
ಬಿಳಿಯಾಗುವುದು ಪೋಷಕರ ಕೂದಲು
ವೃದ್ಧಾಪ್ಯದಿ ಎಲ್ಲರೂ ಬಯಸುವರು ಶಾಂತಿ
ಕೆಲವರಿಗೆ ಮಾತ್ರ ಮಕ್ಕಳಿಂದ ನೆಮ್ಮದಿ
ಕೆಲವರಿಗೆ ಮಕ್ಕಳು ದೂರ ಮಾಡಿದ ಬೇಗುದಿ
ಇದೇ ಎಲ್ಲರ ಜೀವನದ ಪರಿಸ್ಥಿತಿ
ಹಿರಿಯರು ಹೇಳಿರುವರು ಆಗಲೇ
ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ ಬದುಕೆಲ್ಲ ಕತ್ತಲೆ
ಜೀವನದಿ ಹೋಗಲಾಡಿಸಿ ಈ ಕತ್ತಲೆ
ಬದುಕಲ್ಲಿ ಏನಾದರೂ ಸಾಧಿಸಿದಾಗಲೇ
ಬದುಕಲ್ಲಿ ಮೂಡುವುದು ಚಿತ್ತಾರದ ಅಲೆ
ಆಗಲೇ ಜೀವನ ಸಾರ್ಥಕ ಕಾಣಲೇ
ಲೈಫು ಇಷ್ಟೇನೆ .......
ಇಂತಿ,
ನಾಗೇಶ್.. :)
No comments:
Post a Comment